ನಾಳೆಯಿಂದ ಚಿತ್ರಮಂದಿರಗಳು, ಕಾಲೇಜು ಓಪನ್: ಆರ್. ಅಶೋಕ್ | ಜನತಾ ನ್ಯೂಸ್
ಬೆಂಗಳೂರು : ಕೋವಿಡ್ ಮಹಾಮಾರಿ ಮೂರನೇ ಅಲೆ ಆತಂಕವಿದೆ. ಆದರೆ ಸದ್ಯ ಪಾಸಿಟಿವಿಟಿ ದರ ಕಡಿಮೆಯಾಗಿದೆ. ಹೀಗಾಗಿ ಜನ ಜೀವನ ಸಹಜ ಸ್ಥಿತಿಗೆ ಮರಳಿದೆ. ಬಹುತೇಕ ವಾಣಿಜ್ಯ ಚಟುವಟಿಕೆಗಳು ಮುಕ್ತವಾಗಿವೆ. ಮತ್ತಷ್ಟು ಸಡಿಲಿಕೆ ನೀಡುವ ಉದ್ದೇಶದಿಂದ ಇಂದು ಸಿಎಂ ಕೋವಿಡ್ ಉಸ್ತುವಾರಿಗಳ ಸಭೆ ನಡೆಸಿದ್ರು. ಬಳಿಕ ಕೆಲವಷ್ಟು ನಿರ್ಬಂಧ ಸಡಿಲಿಕೆ ಮಾಡಿ ಮಾರ್ಗಸೂಚಿ ಹೊರಡಿಸಿದ್ದಾರೆ.
ಸಿನಿಮಾ ಉದ್ಯಮ ಅವಲಂಬಿತರು ಮತ್ತು ವ್ಯಾಪಾರ, ವಹಿವಾಟು ನಡೆಸುವವರಿಗೆ ಸಹಕಾರಿಯಾಗುವ ರೀತಿ ಅನ್ಲಾಕ್ 4.Oನಲ್ಲಿ ನಿರ್ಬಂಧಗಳನ್ನು ಸಡಿಲಿಕೆ ಮಾಡಲಾಗಿದೆ. ಮೂರನೇ ಅಲೆ ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಕೋವಿಡ್ ಉಸ್ತುವಾರಿ ಸಚಿವರು ಹಾಗು ಅಧಿಕಾರಿಗಳ ಜೊತೆಗೆ ಸಿಎಂ ಯಡಿಯೂರಪ್ಪ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡನೇ ಅಲೆಯಲ್ಲಿ ಲಾಕ್ಡೌನ್ ಮಾಡುವ ಮೂಲಕ ಸೋಂಕನ್ನು ನಿಯಂತ್ರಣ ಮಾಡಿದ್ದೇವೆ. ಈಗ ಹಂತ ಹಂತವಾಗಿ ಅನ್ಲಾಕ್ ಪ್ರಕ್ರಿಯೆ ಮಾಡುತ್ತಿದ್ದೇವೆ. ಇದರ ಇನ್ನೊಂದು ಹಂತವಾಗಿ ನಾಳೆಯಿಂದ ರಾಜ್ಯದಲ್ಲಿ ಚಿತ್ರಮಂದಿರಗಳು, ರಂಗಮಂದಿರಗಳನ್ನು ತೆರೆಯಲು ಅನುಮತಿ ನೀಡಲಾಗುತ್ತಿದೆ ಎಂದರು.
ಇನ್ನು ಉನ್ನತ ಶಿಕ್ಷಣ ಅಂದ್ರೆ ಪದವಿ ಮೇಲ್ಪಟ್ಟ ಕಾಲೇಜುಗಳ ಆರಂಭಕ್ಕೂ ತೀರ್ಮಾನ ಮಾಡಿದ್ದಾರೆ. ಭೌತಿಕ ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳು ಕನಿಷ್ಠ ಮೊದಲ ಲಸಿಕೆ ಡೋಸ್ ಪಡೆಯುವುದು ಕಡ್ಡಾಯ ಮಾಡಿದೆ.
ನೈಟ್ ಕರ್ಫ್ಯೂ ಮುಂದುವರೆಸಲಾಗುತ್ತಿದೆ. ಆದರೆ, ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ರಾತ್ರಿ 9ರ ಬದಲು 10 ಗಂಟೆಯಿಂದ ಕರ್ಫ್ಯೂ ಜಾರಿ ಮಾಡಲಿದ್ದೇವೆ. ಇದರಿಂದಾಗಿ ವ್ಯವಹಾರ ಮಾಡುವವರಿಗೆ, ಉದ್ಯಮಗಳಿಗೆ ಉಪಯೋಗವಾಗಲಿದೆ. ಅಂಗಡಿ-ಮುಂಗಟ್ಟು, ಹೋಟೆಲ್, ರೆಸ್ಟೊರೆಂಟ್ ಇತ್ಯಾದಿ ಎಲ್ಲ ವಲಯಕ್ಕೂ ಹೆಚ್ಚಿನ ಅವಕಾಶ ಸಿಗಲಿದೆ ಎಂದು ಹೇಳಿದರು.